ಶಾಲೆಯ ನಾಲ್ಕು ಗೋಡೆಯ ಸೀಮಿತ, ರಚನಾತ್ಮಕ ವಿಷಯ ಬೋಧನೆಗಿಂತ ಮಿಗಿಲಾಗಿ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿಕೆ ಹೆಚ್ಚಾಗುತ್ತದೆ. ಇದಕ್ಕೆ ಪುಷ್ಠಿ ಕೊಡುವ ಹಲವು ನಿದರ್ಶನಗಳು ಪ್ರತಿಯೊಬ್ಬರ ಜೀವನದಲ್ಲೂ ಇರಬಹುದು. 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಕೂಡ ಸತ್ವ ಪಡೆದುಕೊಳ್ಳುವುದು ಈ ವಿಚಾರ ಸಾರದಿಂದಲೆ. ಈ ಹಿನ್ನೆಲೆಯಿಂದ ಗಣಿತ ವಿಷಯಕ್ಕೆ ಸಂಬಂಧಿಸಿದ ನನ್ನ ಶಾಲಾ ಜೀವನವನ್ನು ಅವಲೋಕಿಸಿದರೆ, ಶಾಲೆಯ ನಾಲ್ಕು ಗೋಡೆಯ ಒಳಗೆ ಕಲಿಸಿದ ಗಣಿತ ನನ್ನ ತಲೆಯೊಳಗೆ ಹೊಗದಿದ್ದುದಕ್ಕೆ ನನ್ನಲ್ಲಿ ಕಾರಣಗಳಿಲ್ಲ. ಆದರೆ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿತ ಲೆಕ್ಕಾಚಾರ ಅಥವಾ ಗಣಿತ ನನ್ನ ಜೀವನವನ್ನು ರೂಪಿಸುವಲ್ಲಿ ನನ್ನನ್ನು ಔದ್ಯೋಗಿಕವಾಗಿ ಬಲಗೊಳಿಸುವಲ್ಲಿ ಸಹಾಯಕವಾಯಿತು.
ಅಪ್ರಸ್ತುತವಾದರೂ ಸಾಂದರ್ಭಿಕ ನೆಲೆಗಟ್ಟಿನಿಂದ ಹೇಳುವುದಾದರೆ, ನನ್ನ ತಂದೆ ಒಂದು ಅಡಿಕೆ ಮಂಡಿಯಲ್ಲಿ (ವಕಾರಿ) ದಿನಗೂಲಿ ನೌಕರ. ಮಂಡಿಗೆ ಅಡಿಕೆ ವಿಲೇವಾರಿಗೆ ಬರುವ ರೈತರು, ವ್ಯಾಪಾರಸ್ತರು ಅಪ್ಪನ ಕವಳದ ಚಂಚಿಗೆ (ಎಲೆ ಅಡಿಕೆ ಚೀಲ) ಕೈಹಾಕುತ್ತಿದ್ದುದು ಸಾಮಾನ್ಯ. ತಾಂಬೂಲದ ರಸಸ್ವಾದದ ಜೊತೆ ನಡೆದ ಮಾತುಕತೆಯ ನಂತರ ತಾವು ತಂದ ಅಡಿಕೆ ಚೀಲದಿಂದ ಒಂದಷ್ಟು ಅಡಿಕೆಗಳನ್ನು ತಂದೆಯವರ ಕೈಗೆ ಕೊಟ್ಟು ಋಣಮುಕ್ತರಾಗುವುದು ಅವರ ವಾಡಿಕೆ. ಬರುವ ತಿಂಗಳ ಸಂಬಳದಲ್ಲಿ ನಾಲ್ಕು ಜನ ಮಕ್ಕಳ ಜೊತೆ ಇಡೀ ಸಂಸಾರ ನಿಭಾಯಿಸಲು ಸಾದ್ಯವಾಗದ, ಬಲು ಕಷ್ಟದ ಸಂದರ್ಭವದು. ಹೀಗೆ ಪ್ರತಿದಿನ ಮಂಡಿಗೆ ಬರುವ ವ್ಯಾಪಾರಸ್ತರು ನೀಡಿದ ಅಡಿಕೆಯ ಮೊತ್ತವನ್ನು ವಾರದ ಕೊನೆ, ಅಂದರೆ ಭಾನುವಾರದಂದು ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರÀ ತೂಗಿಸುವುದು ತಂದೆಯ ಉಪವೃತ್ತಿಯಾಗಿತ್ತು.
ಈ ಮೇಲಿನ ಪೀಠಿಕೆಯ ಉದ್ದೇಶ ಅಡಿಕೆ ಮಂಡಿಗೂ ಹಾಗೂ ನನ್ನ ಲೆಕ್ಕಾಚಾರಕ್ಕೂ ಇರುವ ಸಂಬಂಧವನ್ನು ನಿರೂಪಿಸುವುದು. ಪ್ರತಿ ಶನಿವಾರ ಶಾಲೆಗೆ ಒಪ್ಪತ್ತು (ಅರ್ಧದಿನ), ಇನ್ನುಳಿದ ಅರ್ಧದಿನ ನಾನಿರುತ್ತಿದ್ದುದು ಅಪ್ಪ ಕೆಲಸ ಮಾಡುವ ಅಡಿಕೆ ಮಂಡಿಯಲ್ಲಿ. ಮಂಡಿಯಲ್ಲಿ ಅಪ್ಪನ ಕೆಲಸ ವ್ಯಾಪಾರಸ್ತರು ತಂದ ಅಡಿಕೆ ಚೀಲಗಳನ್ನು ಕಾಟದ (ತಕ್ಕಡಿ) ಮೇಲಿಟ್ಟು ಅದರ ತೂಕವನ್ನು ಬರೆದುಕೊಳ್ಳುವುದು ಮತ್ತು ಬೆಲೆಯನ್ನು ನಿಗದಿಪಡಿಸುವುದು. ಅಪ್ಪನ ಜೊತೆಯಲ್ಲಿ ನಾನೂ ಕೂಡ ತೂಕ ಸರಿಪಡಿಸುವುದಕ್ಕಾಗಿ ಚೀಲಕ್ಕೆ ಅಡಿಕೆಯನ್ನು ಸೇರಿಸುವ ಹಾಗೂ ತೆಗೆಯುವ (ಸಂಕಲನ ಮತ್ತು ವ್ಯವಕಲನ) ಕೆಲಸವನ್ನು ನಿಭಾಯಿಸುತ್ತಿದ್ದೆ. ಮಂಡಿಯಲ್ಲಿ ಅಡಿಕೆಗಳೊಂದಿಗೆ ಆಡುವುದೆಂದರೆ ನನಗೆ ಬಲು ಮೋಜು. ಅಡಿಕೆಗಳನ್ನು ಎಣಿಸುವುದು, ಎಷ್ಟು ಅಡಿಕೆಗಳನ್ನು ಸೇರಿಸಿದರೆ 10 ಗ್ರಾಂ ಅಗುತ್ತದೆ, ಎಷ್ಟು ಅಡಿಕೆಗಳನ್ನು ಸೇರಿಸಿದರೆ 1 ಕಿಲೋ ಆಗುತ್ತದೆ ಎಂದು ಬರೆದುಕೊಳ್ಳುವುದು, ಇವೆಲ್ಲವೂ ಆ ಅಟಗಳಲ್ಲಿ ನನಗೆ ಗೊತ್ತಿಲ್ಲದೆ ಸೇರಿಕೊಂಡಿದ್ದ ಗಣಿತ ಕ್ರಿಯೆಗಳಾಗಿದ್ದವು. ನನಗೆ ಗ್ರಾಂ, ಕಿಲೊ ಗ್ರಾಂ, ಕ್ವಿಂಟಾಲು ಹಾಗೂ ಟನ್ಗಳ ಪರಿಚಯವಾದದ್ದು ಆ ಅಡಿಕೆ ಮಂಡಿಯಲ್ಲಿ.
ಅಲ್ಲದೆ ಅಪ್ಪನ ಜೊತೆಯಲ್ಲಿ ಭಾನುವಾರ ಅಡಿಕೆ ಮಾರಲು ಹೋಗುವಾಗ ನಾನೂ ಹೋಗುತ್ತಿದ್ದೆ. ಅಪ್ಪನಿಗೆ ಮಂಡಿಯಲ್ಲಿ ತೂಕ ಹಾಗೂ ಬೆಲೆಯ ಜ್ಞಾನ ಇದ್ದುದರಿಂದ ಪೇಟೆಯ ಅಡಿಕೆ ಮಂಡಿಗಳಲ್ಲಿ ಸರಿಯಾದ ಚೌಕಾಶಿ ಮಾಡಿ ಸಮ ಪ್ರಮಾಣದ ಲಾಭ ಪಡೆಯುತ್ತಿದ್ದರು. ಇದು ನನಗೆ ವ್ಯವಹಾರ ಜ್ಞಾನ ಅರ್ಥ ಮಾಡಿಕೊಳ್ಳಲು ಸಾದ್ಯವಾಯಿತು. ಶಾಲೆಯನ್ನೇ ಕಲಿಯದೆ ಬರಿ ವ್ಯವಹಾರ ಜ್ಞಾನ ಹಾಗೂ ಅನುಭವದಿಂದ ವ್ಯಾಪಾರದಲ್ಲಿ ಪರಿಣಿತಿ ಪಡೆದ ತಂದೆಯ ಪ್ರವೃತ್ತಿ ನನ್ನಲ್ಲಿ ಬೆಳೆದದ್ದು ಆಶ್ಚರ್ಯವಲ್ಲ. ಬಹುಶಹ ಈ ಕಾರಣದಿಂದಲೆ ಶಾಲೆಯಲ್ಲಿ ಕಲಿಸುವ ಯಾವುದೇ ಗಣಿತದ ನಿಯಮಗಳು ನನಗೆ ಆಸಕ್ತಿ ಮೂಡಿಸುತ್ತಿರಲಿಲ್ಲ. ಹಾಗಾಗಿ ನಾನು ಶಾಲೆಯ ಗಣಿತ ಪರೀಕ್ಷೆಯಲ್ಲಿ 15ಕ್ಕಿಂತ (ಒಟ್ಟು ಅಂಕ 25) ಹೆಚ್ಚು ಅಂಕ ಗಳಿಸಿದ ದಾಖಲೆಯೂ ಇಲ್ಲ. ಗಣಿತ ಶಿಕ್ಷಕರ ಹೊಡೆತಕ್ಕೆ ಮೈಮೇಲೆ ಬರೆಗಳೆದ್ದರೂ ಈ ಚರ್ಮಕ್ಕೆ ಆ ವಿಷಯಕ್ಕೆ ಮರ್ಯಾದೆ ಕೊಡುವ ಸಂವೇದನೆ ಇರಲಿಲ್ಲ. ಆದರೆ ಅಪ್ಪ ಪ್ರತಿ ದಿನ ತರುವ ಚಿಲ್ಲರೆಗಳನ್ನು ಎಣಿಸುವ, ಅಮ್ಮ ಕೊಡಿಸಿದ್ದ ಮಡಿಕೆ ಹುಂಡಿಯಲ್ಲಿ ನಾಕಾಣೆ, ಎಂಟಾಣೆ ನಾಣ್ಯ ಕೂಡಿಡುವ ವ್ಯವಹಾರ ಅಚ್ಚುಕಟ್ಟಾಗಿತ್ತು. ಹಾಗೂ ಹೀಗೂ ಅಂಬೆಗಾಲಿಡುತ್ತ ಎಸ್.ಎಸ್.ಎಲ್.ಸಿ ಪಾಸಾದಾಗ ಬಹಳ ಸಂತೋಷ ಪಟ್ಟಿದ್ದೆ. ಇನ್ನು ಮುಂದೆ ಗಣಿತ ವಿಷಯ ನನ್ನ ಜೀವನದಲ್ಲೇ ಬರಲಿಕ್ಕಿಲ್ಲ ಎಂದು ಕಲಾ ವಿಭಾಗವನ್ನು ಆಯ್ದುಕೊಂಡೆ.
ಅಲ್ಲೊಂದು ಆಶ್ಚರ್ಯ!! ಇತರ ವಿಷಯಗಳೊಂದಿಗೆ ಕಲಾ ವಿಭಾಗದಲ್ಲಿ ನಾನು ಆಯ್ದುಕೊಂಡ ಮತ್ತೊಂದು ವಿಷಯ ಅರ್ಥಶಾಸ್ತ್ರ. ಈ ವಿಷಯ ತನ್ನನ್ನು ಅನಾವರಣಗೊಳಿಸಕೊಳ್ಳುತ್ತಾ ಹೋಗುವಾಗ ನನಗೆ ಅರ್ಥವಾದದ್ದು, ಅರ್ಥಶಾಸ್ತ್ರಕ್ಕೆ ಕೊಡುಗೆಯನ್ನು ನೀಡಿದ ಎಲ್ಲಾ ಅರ್ಥಶಾಸ್ತ್ರಜ್ಞರೂ ಪ್ರಸಿದ್ಧ ಗಣಿತ ಶಾಸ್ತ್ರಜ್ಞರು ಎಂದು. ಇಲ್ಲಿ ಸಿದ್ಧಾಂತಗಳ ಜೊತೆಯಲ್ಲಿ ಸಂಖ್ಯಾಶಾಸ್ತ್ರದ ಕೆಲವು ಲೆಕ್ಕಾಚಾರ ಮಾಡಬೇಕಿತ್ತು. ಆದರೆ ಇಲ್ಲಿ ನನ್ನ ಜೀವನವನ್ನು ಸುಲಭಗೊಳಿಸಿದ್ದು ನಾನು ಈ ಹಿಂದೆ ತಂದೆಯೊಂದಿಗೆ ಕಳೆದ ಅಡಿಕೆ ಮಂಡಿಯ ಹಾಗೂ ಮಾರುಕಟ್ಟೆ ಸುತ್ತಿ ಪಡೆದ ವ್ಯವಹಾರ ಅನುಭವಗಳು. ಬೇಡಿಕೆ-ಪೂರೈಕೆ, ಏಕಸ್ವಾಮ್ಯ-ದ್ವೀಸ್ವಾಮ್ಯ ಮಾರುಕಟ್ಟೆ, ಮುಕ್ತ ಮಾರುಕಟ್ಟೆ, ಬೆಲೆ ನಿರ್ಧಾರ, ಅಂತರರಾಷ್ಟ್ರೀಯ ವ್ಯಾಪಾರ ಹೀಗೆ ಅರ್ಥಶಾಸ್ತ್ರದ ಈ ಎಲ್ಲಾ ಸಿದ್ಧಾಂತಗಳ ಹಿಂದಿನ ಸಾಮಾನ್ಯ ಜ್ಞಾನ ನಾನು ಶಾಲೆಯ ಹೊರಗೆ ಮಂಡಿಯಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಕಲಿತ ಅನುಭವಗಳೆ ಆಗಿದ್ದವು.
ಒಂದು ಅರ್ಥದಲ್ಲಿ ನನಗೆ ಗಣಿತದಲ್ಲಿ ಸ್ವಲ್ಪ ಆಸಕ್ತಿ ಮೂಡಿಸಿದ್ದು ಅರ್ಥಶಾಸ್ತ್ರ. ಅಭಿವೃದ್ಧಿ ಅರ್ಥಶಾಸ್ತ್ರದ ಅಭಿವೃದ್ಧಿ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗು ಬಡತನ ಸೂಚ್ಯಂಕಗಳನ್ನು ಮಾಪನ ಮಾಡುವಾಗ ಸಮೀಕರಣಗಳನ್ನು ಬಳಸಿ ತುಲನಾತ್ಮಕವಾಗಿ ವಿಶ್ಲೇಷಿಸುವ ವಿಧಾನ ನನ್ನನ್ನು ಹೆಚ್ಚು ಆಕರ್ಷಿಸಿತು. ಇಲ್ಲಿ ಜೀವನಕ್ಕೆ ಹತ್ತಿರವಾದ ಬಡತನದ ಸತ್ಯತೆ ಮತ್ತು ಕಾರಣ, ವ್ಯವಹಾರದ ರೂಪ ರೇಶೆಗಳು, ಆಸೆ, ಸಂಪನ್ಮೂಲ ಇವೆಲ್ಲವುಗಳನ್ನೂ ಸಂಖ್ಯೆಗಳ ಮೂಲಕ ನಿರೂಪಿಸುವ ವಿಧಾನ ಮುಂದಿನ ದಿಕ್ಕನ್ನು ಬದಲಾಯಿಸಿತು. ಇವೆಲ್ಲವೂ ನಾನು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಅತ್ಯಂತ ಕ್ಷಿಷ್ಟ ವಿಷಯಗಳಾದ ಇಕನಾಮಿಟ್ರಿಕ್ಸ್ ಹಾಗೂ ಟೈಮ್ ಸೀರಿಸ್ ಅನ್ನು ಪಾಸುಮಾಡಲು ಸಹಾಯಕವಾದವು.
ಹೀಗೆ ನನ್ನ ಲೆಕ್ಕಾಚಾರ ತಲೆಕೆಳಗಾಗಿ ಕೊನೆಯಲ್ಲಿ ಕೆಲಸಮಾಡಬೇಕಾಗಿ ಬಂದದ್ದು ಒಂದು ಸಂಶೋಧನಾ ಸಂಸ್ಥೆಯಲ್ಲಿ. ಇಲ್ಲಿಯೂ ಕೂಡ ನನಗೆ ಸಿಕ್ಕಿದ್ದು ಅಂಕಿಗಳನ್ನು ಸಂಗ್ರಹಿಸುವ ಮತ್ತು ಅದನ್ನು ವಿಶ್ಲೇಷಿಸುವ ಕೆಲವೇ. ದಾರಿಯುದ್ದಕ್ಕೂ ಬೇಡ ಎಂದು ಬಂದ ಈ ಲೆಕ್ಕಾಚಾರವೇ ಕೊನೆಗೆ ನನ್ನ ಕೈ ಹಿಡಿದದ್ದು, ಬದುಕನ್ನು ರೂಪಿಸಿದ್ದು. ಶಾಲೆಯಲ್ಲಿ ಗಣಿತ ಕಲಿಯದಿದ್ದರೂ ನನ್ನ ಜೀವನಾನುಭವ ಹಾಗೂ ಅರ್ಥಶಾಸ್ತ್ರ ನನಗೆ ಮುಂದೆ ಅದರ ಮೇಲೆ ಪ್ರೀತಿ ಬರಲು ಮತ್ತು ಕಲಿಯಲು ಪ್ರೇರೇಪಿಸಿದ್ದು.
ಈ ನನ್ನ ಅನುಭವದಂತೆಯೇ ಇಂದಿನ ನಮ್ಮ ಶಾಲೆಗಳಲ್ಲಿನ ಮಕ್ಕಳಿಗೂ ಆಗಿರಬಹುದು. ಅವರ ಇಂದಿನ ಶಾಲೆಯಾಚೆಗಿನ ಅನುಭವಗಳು ಮುಂದೊಂದು ದಿನ ಬದುಕಿಗೆ ದಾರಿತೋರಿಸಬಹುದಲ್ಲವೆ???