ಮಣ್ಣು ಗೋಡೆಯ, ಸೋಗೆ ಹೊದಿಕೆಯ, ಮನೆಯ ಮಾಡಿನ ಒಳಗೆ ಮಾಳವ್ವ, ಒಲೆಯ ಮೇಲೆ ಎಸರನ್ನಿಟ್ಟು, ಉರಿಯದೇ ಸತಾಯಿಸುತ್ತಿದ್ದ ಹಸಿ ಕಟ್ಟಿಗೆಯನ್ನು ಹೊತ್ತಿಸಲು ಊದುಬತ್ತಿ ಅಂಡೆಯಿಂದ ಊದುತ್ತಿದ್ದಳು. ಸೊಂಯ್...ಸೊಂಯ್ ಎಂಬ ಆಕೆಯ ಉಸಿರಿನ ರಾಗಕ್ಕೆ ಕೆಮ್ಮು ಹಿಮ್ಮೇಳವಾಗಿತ್ತು. ಮೊದಲೇ ಮಂಜಾಗಿದ್ದ ಕಣ್ಣಿಗೆ ಈಗ ಹೊಗೆ ತುಂಬಿಕೊಂಡಿತ್ತು, ಮಾಳವ್ವನಿಗೆ ಸಿಟ್ಟು ನೆತ್ತಿಗೇರಿತ್ತು
“ರಂಡಿ ಮಗನ ಕಟ್ಟಿಗಿ, ಎಷ್ಟ್ ಬಿಸಿಲಿಗೆ ಹಾಕಿದ್ರೂ ಒಣಗೂದಿಲ್ಲ, ಈ ಮಕ್ಕಳಿಗೋ ಒಣ ಕಟ್ಟಿಗಿ ಆರಿಸ್ಕಂಡ್ ಬನ್ನಿ ಅಂದ್ರೆ ತಿಳುದಿಲ್ಲ, ನೆವಕ್ಕೆ ಕೆಲಸ ಮಾಡ್ತವೆ...ಹಾಳಾಬಿದ್ದುಂದು” ಎಂದು ತನ್ನಷ್ಟಕ್ಕೆ ಗೊಣಗಿಕೊಂಡು ಮೊಮ್ಮಗಳನ್ನು ಕೂಗಿದಳು.
“ಮಗಾ, ಆಯ್ತನೆ, ಎಸ್ರು ಕಾದದೆ, ಅಕ್ಕಿ ಹಾಕು ಬಾ”.
“ತಡಿಯೇ ಮಾರಾಯ್ತಿ, ನಿಂಗಂತು ಸಮಾದಾನನೆ ಇಲ್ಲಾ, ಅಕ್ಕಿ ತೊಳುಕೆ ಹತ್ತಿದ್ದೆ, ಬಂದೆ ಇರು” ಎಂದು ಮೊಮ್ಮಗಳು ಮಾಳವ್ವನನ್ನು ಗದರುತ್ತಾಳೆ.
ಅಕ್ಕಿ ತೊಳೆದು ಒಳಗೆ ಬಂದ ಮೊಮ್ಮಗಳು “ಅವ್ವಾ, ಇದೆಂಥದ್ದೆ, ಮನಿ ತುಂಬಾ ಹೊಗಿ ಮಾಡ್ಕಂಡ್ ಕೂತಿದ್ದೆ, ಒಂಚೂರು ಬೆಂಕಿ ಉರಿಸುಕೆ ಆಗುದಿಲ್ಲ ನಿಂಗೆ...ಸಾಯ್ತದೆ ಇದೊಂದು” ಎಂದು ಬರಬರನೆ ಕಟ್ಟಿಗೆಯನ್ನು ಕುಟ್ಟಿ ಜೋರಾಗಿ ಊದತೊಡಗಿದಳು.
ಆಕೆಗೆ ಹೆದರಿಕೊಂಡೋ ಏನೋ ಪಾಪ ಆ ಕಟ್ಟಿಗೆಯೂ ಸುಮ್ಮನೆ ಉರಿಯತೊಡಗಿತು.
“ಮಗಾ, ಸಣ್ಣ ಮಾವ (ಶಂಕರ) ಬಂದವ್ನಂತನೆ ಮನಿಗೆ? ನಿನ್ನೆ ಲಕ್ಷ್ಮತ್ತಿಗಿ ಹೇಳ್ತಾ ಇದ್ದುಂದು ಕೇಳಿಸ್ಕಂಡೆ. ಮತ್ತೆ ಕಾರ್ಖಾನೆಗೆ ಹೋಗ್ತಿನಿ ಅಂತಿದ್ನಂತೆ, ಅದ್ಕೆ ಕೆಲ್ಸ ಕೇಳ್ಕಂಡ್ ಬರುಕೆ ಹೊನ್ನಾವರಕ್ಕೆ ಹೋಗವ್ನಂತೆ”. ಎಂದು ಮೊಮ್ಮಗಳನ್ನು ಕೇಳಿದಳು.
“ಬಂದಿರುಕೆ ಸಾಕು, ಇಷ್ಟ್ ದಿನ ಬೇಕಾಯ್ತದ್ಯ ಹೋಗಿ ಬರುಕೆ”? ಎಂದು ಮೊಮ್ಮಗಳು ಗೊಣಗಿದಳು.
ಮೊಮ್ಮಗಳ ಅವತಾರ ಮಾಳವ್ವನಿಗೆ ಹೊಸತಾಗಿರಲಿಲ್ಲ. ಹಾಗಾಗಿ ಅವಳ ಮಾತಿನ ಕಡೆ ಗಮನ ಕೊಡದೆ ಎದುರಿನ ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸಿದಳು.
***
ಶಂಕರ, ಮಾಳವ್ವನ ಐದು ಜನ ಮಕ್ಕಳಲ್ಲಿ ಮೂರನೆಯವನು. ಏಳನೇ ತರಗತಿಯ ವರೆಗೆ ಓದಿದ ಈತ ಮನೆಯ ಬಡತನದ ಕಾರಣದಿಂದ ಶಾಲೆ ಬಿಟ್ಟು ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಸ್ವಲ್ಪ ದಿನದ ನಂತರ ದೂರದ ಹೊನ್ನಾವರದ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಖಾಲಿ ಇದೆ ಎಂದು ಸುದ್ದಿ ತಿಳಿದು ಹೆಗಲಿಗೆ ಚೀಲ ಏರಿಸಿ ಹೊರಟಾಗ ಅವನಿಗೆ ಹದಿನಾಲ್ಕು ವರ್ಷ. ಹೊನ್ನಾವರದ ದಿವಗಿ ಊರಿನಲ್ಲಿರುವ ಒಬ್ಬ ಸಂಬಂಧಿಕರ ಮನೆಯಲ್ಲಿ ಇವನ ವಾಸಕ್ಕೆ ವ್ಯವಸ್ತೆ ಆಗುತ್ತದೆ. ಅಲ್ಲಿ ಈತನ ಓರಗೆಯನಾದ ಕೃಷ್ಣ ಇವನಿಗೆ ಸಂಗಾತಿಯಾಗುತ್ತಾನೆ.
ಮಾಳವ್ವನ ಮನೆಯಲ್ಲಿ ಪೂಜೆ, ನಂಬಿಕೆಗಳು, ಆಚರಣೆಗಳು ಹೆಚ್ಚು. ವಾರಕ್ಕೊಮ್ಮೆ ದೆಯ್ಯ (ದೆವ್ವ) ಕರೆಯದೇ ಇರುತ್ತಿರಲಿಲ್ಲ. ನೆಗಡಿ, ಕೆಮ್ಮು, ಜ್ವರ ಬಂದರೆ ಆಸ್ಪತ್ರೆಗೆ ಹೋದದ್ದೆ ಕಮ್ಮಿ. ಎಲ್ಲದಕ್ಕೂ ದೆಯ್ಯದ ಆಶ್ವಾಸನೆಯೇ ಆಗಬೇಕು. ಆದರೆ ಶಂಕರ ನಾಸ್ತಿಕ, ದೇವರ ತಲೆ ಮೇಲೆ ಒಂದು ಹೂವು ಮುಡಿಸಿದವನಲ್ಲ, ಹಬ್ಬ ಹರಿದಿನ ಆಚರಿಸಿದವನಲ್ಲ. ಮನೆಯಿಂದ ದಿವಗಿ ಹೆಂಚಿನ ಕಾರ್ಖಾನೆಗೆ ನಾಲ್ಕು ಕಿಲೋ ಮೀಟರು ದೂರ. ಬಸ್ಸಿನ ವ್ಯವಸ್ತೆ ಇದ್ದರೂ ದಿನವೂ ನಡೆದೇ ಹೋಗುತ್ತಿದ್ದ. ಆ ದಾರಿಯ ಮಧ್ಯೆ ಒಂದು ಸ್ಮಶಾನವಿದೆ. ಆದರೆ ಆತನಿಗೆ ಅದರ ಪರಿವೆ ಇರುತ್ತಿರಲಿಲ್ಲ. ಹಗಲು, ರಾತ್ರಿ ಏನಿದ್ದರೂ ಅದೇ ದಾರಿಯಲ್ಲಿ ಪ್ರಯಾಣ. ಆತನಿಗೆ ಕೆಲಸದ ಮೇಲಿನ ನಂಬಿಕೆಗಿಂತ ಹೆಚ್ಚಿನದು ಏನೂ ಇರಲಿಲ್ಲ, ಅದು ನಿಶ್ಚಲವಾಗಿ ನಿಂತ ಬಂಡೆಯಂತೆ.
ಶಂಕರ ಏಳನೇ ತರಗತಿ ಮಾತ್ರ ಓದಿದ್ದರೂ ಆತನಿಗಿದ್ದ ಪ್ರಪಂಚ ಜ್ಞಾನ ಅಗಾಧ. ರಾತ್ರಿ ಕೆಲಸ ಮಗಿಸಿ ಮನೆಗೆ ಬರುವುದು ಎಷ್ಟೇ ತಡವಾದರೂ ಪುಸ್ತಕ ಓದದೆ ಮಲಗುತ್ತಿರಲಿಲ್ಲ. ಕೃಷ್ಣನ ತರಗತಿಯ ಎಲ್ಲಾ ಪುಸ್ತಕಗಳನ್ನೂ ಶಂಕರ ಓದಿ ಮುಗಿಸುತ್ತಿದ್ದ. ಬದಿಯಲ್ಲಿ ಬಿದ್ದ ಚಿಕ್ಕ ಪೇಪರ್ ಚೂರನ್ನೂ ಒಮ್ಮೆ ಕಣ್ಣಾಡಿಸದೆ ಬಿಡುತ್ತಿರಲಿಲ್ಲ. ಯಾವ ವಿಷಯದ ಮೇಲೂ ಆತನಿಗೆ ಪ್ರಭುತ್ವವಿತ್ತು. ಅಷ್ಟೇ ಚತುರ ಮಾತುಗಾರ ಕೂಡ. ಆತನಿಗೆ ಸುಮಾರು 22 ವರ್ಷ ತುಂಬುವಷ್ಟರಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿ ಪ್ರಪಂಚವನ್ನ ಅರ್ಥಮಾಡಿಕೊಂಡಿದ್ದ. ಚದುರಂಗ ಆತನಿಗೆ ಪ್ರಿಯವಾದ ಆಟ. ಆತನನ್ನು ಚದುರಂಗದಲ್ಲಿ ಸೋಲಿಸಿದವರಿಲ್ಲ.
ಹೀಗಿರುವಾಗ ಒಮ್ಮೆ ಶಂಕರನಿಗೆ ಒಂದು ಟೆಲಿಗ್ರಾಮ್ ಬರುತ್ತದೆ.
“ಅಣ್ಣನ ಹೆಂಡತಿ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಯಾರೋ ಮಾಟ ಮಾಡಿಸಿದ್ದಾರೆ, ವಿಷಯ ತಿಳಿದ ಕೂಡಲೆ ಶೀಘ್ರ ಹೊರಟು ಬಾ” ಎಂದು ಅದರಲ್ಲಿ ಬರೆದಿತ್ತು.
ಈ ಹಿಂದೆ ಇಂತಹ ವಿಷಯಗಳು ಶಂಕರನ ಮನೆಯಲ್ಲಿ ಸಾಕಷ್ಟು ನಡೆದಿತ್ತು. ನಾಸ್ತಿಕ ಶಂಕರನಿಗೆ ಇವುಗಳಲ್ಲಿ ನಂಬಿಕೆ ಇರಲಿಲ್ಲ. ಖರ್ಚಿಗೆ ಒಂದಷ್ಟು ಹಣ ಕಳುಹಿಸಿ ಸುಮ್ಮನಾಗುತ್ತಿದ್ದ. ಆದರೆ ಈ ಬಾರಿ ಸ್ವಲ್ಪ ವಿಚಲಿತನಾದ. ಮನೆಯ ಈ ಸಮಸ್ಯೆಯನ್ನು ಪರಿಹರಿಸಬೇಕು, ಜನರ ಮೂಢ ನಂಬಿಕೆಯನ್ನು ಕಿತ್ತು ಎಸೆಯಬೇಕು ಎಂದು ನಿರ್ಧರಿಸಿ, ಚೀಲ ಹೆಗಲಿಗೇರಿಸಿ ಬಸ್ ನಿಲ್ದಾಣದ ಕಡೆ ನಡೆದ.
***
ಮನೆಯಲ್ಲಿ ಎಲ್ಲರೂ ಶಂಕರನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಗೇಟಿನ ದೊಣಪೆಯನ್ನು ಸರಿಸಿ ಒಳಗೆ ಬಂದ ಶಂಕರ ಯಾರನ್ನೂ ಮಾತನಾಡಿಸದೇ ಸೀದಾ ಮಧ್ಯ ಮನೆಯನ್ನು ಪ್ರವೇಶಿಸಿದ. ಅದು ಕತ್ತಲೆ ಕೋಣೆ, ಒಳಗೆ ಅಣ್ಣನ ಹೆಂಡತಿ ಪ್ರಜ್ಞೆ ತಪ್ಪಿ ಮಲಗಿದ್ದರು. ಆಕೆಯ ಸುತ್ತಲೂ ನಿಂಬೆ ಹಣ್ಣು, ಅರಶಿಣ-ಕುಂಕುಮವನ್ನು ಚೆಲ್ಲಲಾಗಿತ್ತು. ಒಂದು ಕ್ಷಣಕ್ಕೆ ಆತನಿಗದು ಸ್ಮಶಾನದ ತರ ಕಂಡಿತ್ತು. ಆದರೆ ಯಾರಿಗೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಮನೆಯಲ್ಲಿ ಒಂದು ಕ್ಷಣ ನಿಲ್ಲಲೂ ಆತನಿಗೆ ಆಗಲಿಲ್ಲ. ಸ್ವಲ್ಪ ಯೋಚಿಸಿ, ಪಕ್ಕದ ಸಂಬಂಧಿಕರ ಮನೆಯಾದ ಲಕ್ಷ್ಮತ್ತಿಗೆಯ ಮನೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ.
ಮಹಾದೇವ ಎಂಬುವವನು ಶಂಕರನ ದೂರದ ಸಂಬಂಧಿ, ಆತನ ಮೇಲೆ ದೆವ್ವ ಬರುತ್ತದೆ. ಅಣ್ಣನ ಹೆಂಡತಿಗೆ ಆರೋಗ್ಯ ಸರಿ ಇಲ್ಲದಾಗ ಇವನನ್ನೆ ಕರೆದು ದೆಯ್ಯ ನೋಡಿಸಿತ್ತು. ಆತನ ಸಲಹೆಯ ಮೇರೆಗೆ ಮನೆಯಲ್ಲಿ ಮಾಟ ಕೀಳಿಸುವ ವ್ಯವಸ್ತೆ ಮಾಡಲಾಗಿತ್ತು. ಶಂಕರನಿಗೆ ಇದಾವುದು ಸರಿ ಕಾಣದಿದ್ದರೂ ಆ ಪ್ರಕ್ರಿಯೆಯಲ್ಲಿದ್ದುಕೊಂಡೇ ಅದರ ರಹಸ್ಯವನ್ನು ಬೇಧಿಸಬೇಕಿತ್ತು. ಇಲ್ಲಿಯವರೆಗೂ ಬರಿ ಕೇಳಿ ತಿಳಿದಿದ್ದ ಮಾಟ ಮಂತ್ರಗಳ ವಿಷಯ ಈಗ ಆತನ ಕಣ್ಣೆದುರಿಗೇ ನಡೆಯುತ್ತಿತ್ತು. ಪ್ರತಿ ದಿನ ಪೂಜೆ, ಅಣ್ಣನ ಹೆಂಡತಿಯ ದೇಹದಲ್ಲಿ ಹೊಕ್ಕ ದೆವ್ವದ ಬಾಯಿ ಬಿಡಿಸುವ ಹೋರಾಟ, ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದ ನಿಂಬೆ ಹಣ್ಣು ಇನ್ನೆಲ್ಲಿಯೋ ಮಣ್ಣು ಅಗೆದಾಗ ಸಿಗುತ್ತಿತ್ತು. ದೆಯ್ಯ ಹೇಳಿದ ಮಾತುಗಳೆಲ್ಲವೂ ಸತ್ಯದಂತೆ ಕಾಣತೊಡಗಿತ್ತು. ನಾಲ್ಕು ದಿನದ ರಜೆಹಾಕಿ ಬಂದಿದ್ದ ಶಂಕರನಿಗೆ ದೆವ್ವದ ಹುಡುಕಾಟದಲ್ಲಿ ದಿನಗಳು ಕಳೆದದ್ದು ತಿಳಿಯಲೇ ಇಲ್ಲ. ದೆಯ್ಯ-ಮಾಟಗಳ ಆಟಕ್ಕೆ ಅಂತ್ಯ ಸಿಗಲಿಲ್ಲ ಆದರೆ ಶಂಕರ ಕಾರ್ಖಾನೆಯ ಕೆಲಸ ಕಳೆದುಕೊಂಡಿದ್ದ.
***
ಶಂಕರ ನಿದಾನವಾಗಿ ಬದಲಾಗುತ್ತಿದ್ದ. ಮಾಟ-ಮಂತ್ರ-ದೆವ್ವಗಳ ಸತ್ಯ ತಿಳಿಯದಿದ್ದರೂ ಯಾವುದೋ ಕಾಣದ ಶಕ್ತಿಯ ಕಡೆಗೆ ಅವನ ಮನ ವಾಲುತ್ತಿತ್ತು. ಮನೆಯವರೊಂದಿಗಿನ ಒಡನಾಟ ಕಡಿದುಕೊಂಡಿದ್ದ. ಕೂಡಿಟ್ಟ ಹಣವೆಲ್ಲ ಬರಿದಾಗಿತ್ತು. ಲಕ್ಷ್ಮತ್ತಿಗೆಯ ಋಣದಲ್ಲಿ ಎರಡು ಹೊತ್ತಿನ ಹಸಿವು ನೀಗುತ್ತಿತ್ತು. ಇಡೀ ಮೂವತ್ತು ವರ್ಷದಲ್ಲಿ ದೇವರ ತಲೆಯ ಮೇಲೆ ಒಂದು ಹೂವೂ ಏರಿಸದ ಈತ ಈಗ ದಿನವಿಡಿ ಹೂವಿಗಾಗಿ ಅಲೆಯುತ್ತಿದ್ದ. ದೀಪದ ಎದುರು ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಿದ್ದ. ಆತನ ಮನಸ್ಸು ಆತನ ಹಿಡಿತದಲ್ಲಿ ಇರಲಿಲ್ಲ. ಬದುಕಿಗೆ ಅರ್ಥವಿಲ್ಲ ಎಂದು ಚೀರಾಡುತ್ತಿದ್ದ. ಕೆಲವೊಮ್ಮೆ ಆತ್ಮ ಹತ್ಯೆಗೂ ಯತ್ನಿಸಿದ್ದ. ಹೀಗೆ ನಾಸ್ತಿಕನಾದ ಶಂಕರ ಆಸ್ತಿಕನಾಗಿ ಬದಲಾಗಿದ್ದ.
ಊರಿನವರೆಲ್ಲ ಆತನನ್ನ ಒಬ್ಬ ಹುಚ್ಚನಂತೆ ನೋಡತೊಡಗಿದ್ದರು. ಮನೆ, ಸಂಬಂಧ, ಕೆಲಸ ಎಲ್ಲವೂ ತೊರೆದಿದ್ದ ಶಂಕರನಿಗೆ ಇದ್ದಕ್ಕಿದ್ದಂತೆ ಪಂಡರಾಪುರಕ್ಕೆ ಹೋಗುವ ಯೋಚನೆ ಹೊಳೆದಿತ್ತು. ಇದಾದ ಹಲವು ತಿಂಗಳುಗಳ ನಂತರ ಶಂಕರ ಇದ್ದಕ್ಕಿದ್ದಂತೆ ಕಾಣೆಯಾದ. ಮನೆಯವರೆಲ್ಲರೂ ಆತನ ಹುಡುಕಾಟಕ್ಕೆ ಪ್ರಾರಂಭಿಸಿದರು. ಆದರೆ ಇಲ್ಲಿಯವರೆಗೂ ಆತನ ಸುಳಿವು ಯಾರಿಗೂ ತಿಳಿದಿಲ್ಲ. ಕೆಲವರು ಪಂಡರಾಪುರದ ಮಠದಲ್ಲಿ ಕೂದಲು ಬಿಟ್ಟುಕೊಂಡು ಸನ್ಯಾಸಿಯೊಂತೆ ಅಲೆದಾಡುತ್ತಿದ್ದಾನೆ ಎಂದು ಹೇಳಿದರೆ ಕೆಲವರು ಇತ್ತೀಚೆಗೆ ಊರಿನ ಆಚೆಗಿರುವ ಕೊಳದಲ್ಲಿ ಒಂದು ಹೆಣ ತೇಲುತ್ತಿತ್ತು ಅದರ ಮೇಲೆ ಆತ ಹಾಕಿಕೊಂಡ ಬಟ್ಟೆ ಇತ್ತು ಎಂದು ಹೇಳುತ್ತಾರೆ.
ಆದರೆ ಮಾಳವ್ವನಿಗೆ ಆತ ಮತ್ತೆ ಕೆಲಸ ಕೇಳಿಕೊಂಡು ಕಾರ್ಖಾನೆಗೆ ಹೋದ ವಿಷಯ ಮಾತ್ರ ತಿಳಿದಿದೆ.
***
ಮಾಳವ್ವ ಮೊಮ್ಮಗಳನ್ನು ಕರೆದು “ಯವ್ವಾ, ಸೆಂಜಿ ಆಯ್ತು, ಲಕ್ಷ್ಮತ್ತಿಗಿ ಕೆಲಸದಿಂದ ಬಂದಿರುಕೆ ಸಾಕು, ಸಣ್ಣ ಮಾವ ಬಂದವನ್ಯಾ ಅಂತ ಒಂದ್ ಸಲ ಕೇಳ್ಕಂಡ್ ಬಾರೆ” ಎಂದು ಕೇಳುತ್ತಾಳೆ.
“ನಿಂದೊಂದು ದಿನಾ ಇದೇ ರಾಗ ಆಯ್ತು, ಬಂದ್ರೆ ಮನಿಗೆ ಬರ್ದೆ ಹೋಯ್ತಾರಾ?” ಎಂದು ಮೊಮ್ಮಗಳು ಗೊಣಗಿದಳು.
ಮತ್ತೆ ಮಾಳವ್ವ ಎದುರು ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸುತ್ತಾಳೆ.